
ಮಂಗಳೂರು, ಜ.೩೦: ಅನುಪಮ ಮಾಸಪತ್ರಿಕೆಯ ದಶಮಾನೋತ್ಸವ ಸಮಾರಂಭ ಇಂದು ನಗರದ ಪುರಭವನದಲ್ಲಿ ನಡೆಯಿತು.ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ ಕಾರ್ಯಕ್ರಮದಲ್ಲಿ ಅನುಪಮ ಮಾಸಿಕದ ದಶಮಾನೋತ್ಸವದ ಸಮಾರಂಭದ ವಿಶೇಷಾಂಕವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಒತ್ತಡ ಮತ್ತು ಇತರ ಆಕರ್ಷಣೆಗಳಿಂದಾಗಿ ಇಂದು ಮಕ್ಕಳಲ್ಲಿ ಓದುವ ಹವ್ಯಾಸ ಕುಂಠಿತವಾಗುತ್ತಿದೆ ಎಂದವರು ಹೇಳಿದರು. ಪತ್ರಿಕೆಗಳ ನಡುವೆ ಆರೋಗ್ಯವಂತ ಸ್ಪರ್ಧೆ ಇರಬೇಕೇ ಹೊರತು ಶತ್ರುತ್ವ ಒಳ್ಳೆಯ ಬೆಳವಣಿಗೆಯಲ್ಲ ಎಂದವರು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಮೆನ್ಸ್ ಇಸ್ಲಾಮಿಕ್ ಪಿಯು ಕಾಲೇಜಿನ ಉಪನ್ಯಾಸಕಿ ಮರ್ಯಮ್ ಶಹೀರ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅನುಪಮ ಮಹಿಳಾ ಮಾಸಿಕದ ಪ್ರಧಾನ ಸಂಪಾದಕಿ ಶಹನಾಝ್ ಎಂ., ಅನುಮಪ ಮಾಸ ಪತ್ರಿಕೆಯನ್ನು ಶೇ.೪೫ರಷ್ಟು ಮುಸ್ಲಿಮೇತರರು ಓದುತ್ತಿರುವುದು ಗಮನಾರ್ಹ ಸಂಗತಿ. ಪತ್ರಿಕೆಯು ಕೋಮು ಸೌಹಾರ್ದಕ್ಕೆ ಒತ್ತು ನೀಡುವ ಮೂಲಕ ಮಹಿಳೆಯರ ನೋವು ನಲಿವಿಗೆ ಧ್ವನಿಯಾಗಿದೆ ಎಂದರು.
ಅತಿಥಿಗಳಾಗಿ ಕರಾವಳಿ ಲೇಖಕಿ ವಾಚಕಿಯರ ಸಂಘದ ಜಿಲ್ಲಾಧ್ಯಕ್ಷೆ ಎ.ಪಿ. ಮಾಲತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶಕುಂತಲಾ ಎ., ಸೈಂಟ್ ಆಗ್ನೆಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಸಿಸ್ಟರ್ ಮಾರಿ ಪ್ರೇಮ್ ಡಿಸೋಜಾ ಉಪಸ್ಥಿತರಿದ್ದರು.
ನೂರ್ಜಹಾನ್, ಇಶ್ರತ್ ರಹೀಮಾ ಮತ್ತು ಕೌಶರ್ ಬಾನು ಅನುಪಮ ಹಾಡು ಹಾಡಿದರು. ಕಾರ್ಯಕ್ರಮದಲ್ಲಿ ಆಯ್ದ ಓದುಗರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅನುಪಮಾ ಮಹಿಳಾ ಮಾಸಿಕದ ಸಬೀಹಾ ಫಾತಿಮಾ ವಂದಿಸಿದರು. ಕೆ.ಎ. ರೋಹಿಣಿ ಮತ್ತು ಲುಬ್ನಾ ಝಕೀಯ್ಯ ಕಾರ್ಯಕ್ರಮ ನಿರೂಪಿಸಿದರು.
source: vartha bharati
No comments:
Post a Comment