'ಮುಖ್ಯಮಂತ್ರಿಗಳು ಮೊದಲು ಭಟ್ಟಂಗಿಗಳ ಮಾತು ಕೇಳುವುದನ್ನು ನಿಲ್ಲಿಸಬೇಕು. ಕೂಡಲೇ ಸಂಪುಟ ಪುನಾರಚನೆ ಮಾಡಿ ಹಿರಿಯ ಶಾಸಕರಿಗೆ ಆದ್ಯತೆ ನೀಡಬೇಕು. ಸೋಲುಂಡವರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನ ಕೊಡಬಾರದು'.ಇದು ಸೋಮವಾರ ನಗರದ ಹೊರವಲಯದ ರೆಸಾರ್ಟ್ನಲ್ಲಿ ದಿನವಿಡೀ ನಡೆದ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು, ಸಂಸದರು ವ್ಯಕ್ತಪಡಿಸಿದ ಅಭಿಪ್ರಾಯ.
ರೇಣುಕಾಚಾರ್ಯಗೆ ಸಚಿವ ಸ್ಥಾನ ನೀಡಿದ ನಂತರ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಶಾಸಕ, ಸಂಸದರ ಅಭಿಪ್ರಾಯ ಸಂಗ್ರಹಕ್ಕಾಗಿ ನಿನ್ನೆ ಪಕ್ಷದ ರಾಜ್ಯಾಧ್ಯಕ್ಷ ಸದಾನಂದ ಗೌಡ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಯಿತು.
ಪಕ್ಷದೊಳಗಿನ ಭಿನ್ನಮತ ಶಮಕ್ಕಾಗಿ ನಡೆದ ಶಾಸಕಾಂಗ ಪಕ್ಷದ ಸಭೆಗೂ ಕೂಡ ಸುಮಾರು 12ಮಂದಿ ಶಾಸಕರು, ಐದು ಮಂದಿ ವಿಧಾನಪರಿಷತ್ ಸದಸ್ಯರು, ಐದು ಮಂದಿ ಸಂಸದರು ಗೈರು ಹಾಜರಾಗಿದ್ದರು. ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ರೇಣುಕಾಚಾರ್ಯ, ಸಂಸದ ಅನಂತ ಕುಮಾರ್ ಹೆಗಡೆ, ಜೆ.ಶಾಂತಾ ಗೈರು ಹಾಜರಾದ ಪ್ರಮುಖರಾಗಿದ್ದಾರೆ. ಆದರೂ ಪಕ್ಷದ ಇತ್ತೀಚೆಗಿನ ನಿಲುವಿನ ಬಗ್ಗೆ ಬಂಡಾಯ ಶಾಸಕರು, ಸಂಸದರು ಸಭೆಯಲ್ಲಿ ತೀವ್ರ ಆಕ್ಷೇಪವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಅಲ್ಲದೇ, ಶಾಸಕಾಂಗ ಪಕ್ಷದ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ಸದಾನಂದ ಗೌಡ ಅವರು ಮಂಗಳವಾರ ದೆಹಲಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ವರದಿ ಸಲ್ಲಿಸಲಿದ್ದಾರೆ. ಆ ನಿಟ್ಟಿನಲ್ಲಿ ಶೀಘ್ರವೇ ಸಮನ್ವಯ ಸಮಿತಿ ಸದಸ್ಯರು ಸಭೆ ಸೇರಿ ಶಾಸಕಾಂಗ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಗೌಡರು ಹೇಳಿದ್ದಾರೆ.
Jan 5, 2010
Subscribe to:
Post Comments (Atom)
No comments:
Post a Comment