
ನವದೆಹಲಿ, ಗುರುವಾರ, 11 ಫೆಬ್ರವರಿ 2010( 08:56 IST )
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೊಗಳಿದರೂ ಅಪಾಯ, ದೂರಿದರೂ ಅಪಾಯ; ಇದರ ಹಿಂದೆ ಬೇರೇನೋ ಇದೆ ಎಂದೇ ಹೆದರಬೇಕಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಅವರನ್ನು ನಿರ್ಲಕ್ಷಿಸುವಂತಿಲ್ಲ ಎಂದು ಸಮಾಜವಾದಿ ಪಕ್ಷದಿಂದ ದಬ್ಬಿಸಿಕೊಂಡ ಬಳಿಕ ಸಕ್ರಿಯ ರಾಜಕಾರಣದಿಂದ ದೂರ ಉಳಿದಿರುವ ಅಮರ್ ಸಿಂಗ್ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ.
ಬಿಜೆಪಿಯ ನಾಯಕ ಮೋದಿಯವರನ್ನು ಯಾರಾದರೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಭಾರತದ ರಾಜಕಾರಣದಲ್ಲಿ ಉಪೇಕ್ಷಿಸಲಾಗದ ವ್ಯಕ್ತಿಗಳಲ್ಲಿ ಓರ್ವ ಮೋದಿ ಎಂದಿದ್ದಾರೆ.
ನರೇಂದ್ರ ಮೋದಿಯವರು ಮತ್ತೆ ಭಯೋತ್ಪಾದನೆಯ ವಿಚಾರದ ಕುರಿತು ಮಾತನಾಡಿದ್ದಾರೆ. ಆದರೆ ಈ ಬಾರಿ ಅವರು ಗೃಹಸಚಿವ ಪಿ. ಚಿದಂಬರಂ ಮತ್ತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಹೊಗಳಿದ್ದಾರೆ. ಭಯೋತ್ಪಾದನೆ ಮತ್ತು ಆಂತರಿಕ ಬೆದರಿಕೆಗಳನ್ನು ಎದುರಿಸಲು ಕೇಂದ್ರ ಸರಕಾರ ನಡೆಸಿದ ಸಿದ್ಧತೆ ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ಬಾಯ್ತುಂಬಾ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ ಎಂದು ಅಮರ್ ಬರೆದಿದ್ದಾರೆ.
ಆದರೆ ಮೋದಿಯವರ ಹೊಗಳಿಕೆಯಾಗಲೀ ಅಥವಾ ಆಕ್ರೋಶದ ಮಾತುಗಳಾಗಲೀ, ಎರಡೂ ತುಂಬಾ ಅಪಾಯಕಾರಿ. ಅವರ ಹೊಗಳಿಕೆಯು ಕೇಂದ್ರ ಸರಕಾರಕ್ಕೆ ಕೋಮು ಬಣ್ಣವನ್ನು ಹಚ್ಚಲಿದೆಯೋ ಎಂದು ನಾನು ಚಿಂತಿತನಾಗಿದ್ದೇನೆ ಎಂದು ಸಮಾಜವಾದಿ ಪಕ್ಷದ ಮಾಜಿ ನಾಯಕ ಹೇಳಿಕೊಂಡಿದ್ದಾರೆ.
ಇಷ್ಟೆಲ್ಲಾ ಆದ ಮೇಲೂ ಮೋದಿಯವರನ್ನು ಬಹಿಷ್ಕರಿಸಲು ಭಾರತವೆನ್ನುವುದು ಅಮೆರಿಕಾವಲ್ಲ. ಜನತೆಯಿಂದ ಆರಿಸಿ ಬಂದಿರುವ ಗುಜರಾತ್ ಮುಖ್ಯಮಂತ್ರಿಯವರನ್ನು ಮನಮೋಹನ್ಜೀ, ಚಿದಂಬರಂಜೀ, ಮುಖೇಶ್ ಅಂಬಾನಿಜೀ, ಅಮಿತಾಬ್ ಬಚ್ಚನ್ ಮತ್ತು ಲಲಿತ್ ಮೋದಿ ಬಯಸಿದರೂ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹಿಂದಿಯಲ್ಲಿ ಬರೆದಿದ್ದಾರೆ.
ಭಲೇ ನರೇಂದ್ರ ಭಾಯ್ ಎಂದು ಮೆಚ್ಚುಗೆ ಸೂಚಿಸುತ್ತಾ, ಇದು ಅವರನ್ನು ಇಷ್ಟಪಡುತ್ತಿರುವುದು ಅಥವಾ ದ್ವೇಷಿಸುತ್ತಿರುವುದು ಎಂದರ್ಥವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಭಾರತೀಯ ರಾಜಕಾರಣದಲ್ಲಿ ಮೋದಿಯವರನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅಮರ್ ಅಭಿಪ್ರಾಯಪಟ್ಟಿದ್ದಾರೆ.
source:webdunia
No comments:
Post a Comment