ಹೈದರಾಬಾದ್, ಬುಧವಾರ, 10 ಫೆಬ್ರವರಿ 2010( 13:30 IST )
ಸಾಲ ವಾಪಸ್ ಮಾಡಿಲ್ಲ ಎಂದು ಆಕ್ರೋಶಗೊಂಡಿದ್ದ ಶಿಕ್ಷಕನೋರ್ವ ತಾಯಿಯೆದುರೇ 10ರ ಹರೆಯದ ಬಾಲಕನ ಗಂಟಲನ್ನು ಸೀಳಿ ಹಾಕಿದ ಅಮಾನುಷ ಘಟನೆ ಆಂಧ್ರಪ್ರದೇಶದಿಂದ ವರದಿಯಾಗಿದೆ.
ವಿಜಯವಾಡದ ಹನಂಕೊಂಡಾ ಎಂಬಲ್ಲಿ ಮಂಗಳವಾರ ಇದು ನಡೆದಿದ್ದು, ಶಿಕ್ಷಕ ಪರಾರಿಯಾಗಿದ್ದಾನೆ. ಬಾಲಕ ಗಂಭೀರ ಸ್ಥಿತಿಯಲ್ಲಿ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಇ. ಉದಯ ಕಿರಣ್ ಕುಟುಂಬದ ಆಪ್ತ ಎಂದು ಹೇಳಲಾಗಿರುವ ನಾಗರಾಜು ಎಂಬ ಸರಕಾರಿ ಶಾಲೆಯ ಶಿಕ್ಷಕನಿಗೆ ಬಾಲಕನ ತಂದೆ ಎಲ್ಲಯ್ಯ ಸಾಲ ಮರಳಿಸಬೇಕಿತ್ತು. ಇದನ್ನು ಪ್ರಶ್ನಿಸಲು ಬಂದಿದ್ದ ಶಿಕ್ಷಕ ಎಲ್ಲಯ್ಯನ ಮಗನ ಕತ್ತನ್ನೇ ಸೀಳಿ ಹಾಕಿದ್ದಾನೆ.
ಘಟನೆ ವಿವರ..
ಅಪರಾಹ್ನ ಮೂರು ಗಂಟೆ ಹೊತ್ತಿಗೆ ನೆಕ್ಕೊಂಡಾ ಮಂಡಲ್ನಲ್ಲಿನ ಮದುಗಲಾ ತಂಡಾ ಸರಕಾರಿ ಶಾಲೆಯ ಶಿಕ್ಷಕ ನಾಗರಾಜ ಎಂಬಾತ ವಿಕಾಸ ನಗರ ಕಾಲೊನಿಯಲ್ಲಿನ ಉದಯ ಕಿರಣ್ ಮನೆಗೆ ಬಂದಿದ್ದ.
ಭೂಪಲಪಳ್ಳಿಯಲ್ಲಿ ಅರಣ್ಯ ಇಲಾಖೆಯ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಬಾಲಕನ ತಂದೆ ಎಲ್ಲಯ್ಯ ಈ ಸಂದರ್ಭದಲ್ಲಿ ಮನೆಯಲ್ಲಿರಲಿಲ್ಲ ಎಂದು ಕಿರಣ್ ತಾಯಿ ಮೀನಾ ಕುಮಾರಿ ತಿಳಿಸಿದ್ದಾರೆ.
ನಾನು ಮನೆಕೆಲಸ ನಿರತಳಾಗಿದ್ದಾಗ ನಾಗರಾಜು ನನ್ನ ಮಗನಲ್ಲಿ ಒಂದು ಲೋಟ ನೀರು ಕೊಡುವಂತೆ ಕೇಳಿದ. ಮಗ ನೀರು ತರಲೆಂದು ಅಡುಗೆ ಕೋಣೆಯತ್ತ ಹೊರಡುತ್ತಿರುವಂತೆ ಆತನನ್ನು ಬಿಗಿದು ಹಿಡಿದ ನಾಗರಾಜು ಗಂಟಲನ್ನು ಸೀಳಿ ಹಾಕಿದ. ಮಗ ಅರಚುತ್ತಿದ್ದುದನ್ನು ಕೇಳಿ ತಕ್ಷಣವೇ ನಾನು ಬಂದು ನೋಡಿದಾಗ ಆತ ರಕ್ತದೋಕುಳಿಯಲ್ಲಿ ಬಿದ್ದಿದ್ದ ಎಂದು ಬಾಲಕನ ತಾಯಿ ವಿವರಿಸಿದ್ದಾರೆ.
ಉದಯ ಕಿರಣ್ ಮೇಲೆ ಮತ್ತಷ್ಟು ಗಾಯ ಮಾಡಲು ಯತ್ನಿಸುವಾಗ ನಾನು ಆತನ ಕೈಯಿಂದ ಚೂರಿಯನ್ನು ಕಿತ್ತುಕೊಂಡೆ. ಸ್ವಲ್ಪವೇ ಹೊತ್ತಿನಲ್ಲಿ ನಾಗರಾಜು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಕೈಗೆ ಗಾಯ ಮಾಡಿಕೊಂಡಿರುವ ಮೀನಾ ಕುಮಾರಿ ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ಬಾಲಕನನ್ನು ಇಲ್ಲಿನ ಮಹಾತ್ಮ ಗಾಂಧಿ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ ಉದಯ ಕಿರಣ್ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
Source:webdunia
Feb 10, 2010
Subscribe to:
Post Comments (Atom)
1 comment:
very nice website, keep it up
Post a Comment