ವಿಶ್ವಕಪ್ ಹಾಕಿ ಚಾಂಪಿಯನ್ಷಿಪ್ ತರಬೇತಿ ಕೈಬಿಟ್ಟು ಪ್ರತಿಭಟನೆಗಿಳಿದಿದ್ದ ಭಾರತ ತಂಡದ ಸಂಭವನೀಯ ಆಟಗಾರರಿಗೆ ಎಲ್ಲ ನಿಟ್ಟಿನಿಂದ ಬೆಂಬಲ ವ್ಯಕ್ತವಾದ ನಂತರ, ಅವರ ಸಮಸ್ಯೆಯೂ ಪರಿಹಾರವಾಗುವ ಆಸೆಯ ಕಿರಣಗಳು ಮೂಡಿವೆ.  
 
ನವದೆಹಲಿ (ಪಿಟಿಐ): ವಿಶ್ವಕಪ್ ಹಾಕಿ ಚಾಂಪಿಯನ್ಷಿಪ್ ತರಬೇತಿ ಕೈಬಿಟ್ಟು ಪ್ರತಿಭಟನೆಗಿಳಿದಿದ್ದ ಭಾರತ ತಂಡದ ಸಂಭವನೀಯ ಆಟಗಾರರಿಗೆ ಎಲ್ಲ ನಿಟ್ಟಿನಿಂದ ಬೆಂಬಲ ವ್ಯಕ್ತವಾದ ನಂತರ, ಅವರ ಸಮಸ್ಯೆಯೂ ಪರಿಹಾರವಾಗುವ ಆಸೆಯ ಕಿರಣಗಳು ಮೂಡಿವೆ.
ತಂಡದ ಪ್ರಾಯೋಜಕರಾಗಿರುವ ಸಹರಾ ಸಮೂಹ ಸಂಸ್ಥೆಯು ತಕ್ಷಣಕ್ಕೆ ಒಂದು ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ಆಟಗಾರರಿಗೆ ತಕ್ಕ ಸಂಬಳ ಸಿಗುವಂತೆ ಮಾಡಿದೆ. ಈ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರು ಆಟಗಾರರ ನೆರವಿಗೆ ಐದು ಕೋಟಿ ರೂ. ನೀಡುವುದಾಗಿ ಪ್ರಕಟಿಸಿದ್ದಾರೆ.
ಮುಂದಿನ ತಿಂಗಳ ಅಂತ್ಯದಲ್ಲಿ ಇಲ್ಲಿಯೇ ಆರಂಭವಾಗಲಿರುವ ಪಿಐಎಚ್ ವಿಶ್ವಕಪ್ ಹಾಕಿ ಚಾಂಪಿಯನ್ಷಿಪ್ಗಾಗಿ ಪುಣೆಯಲ್ಲಿ ನಡೆಯುತ್ತಿದ್ದ ಸಂಭವನೀಯರ ಶಿಬಿರದಲ್ಲಿ ಪಾಲ್ಗೊಂಡಿದ್ದ ಇಪ್ಪತ್ತೆರಡು ಆಟಗಾರರು ಸಂಬಳದ ವಿಷಯದಲ್ಲಿ ಅಸಮಾಧಾನ ವ್ಯಕ್ತಪಡಿಸಿ, ಶಿಬಿರದಿಂದ ಹೊರನಡೆದಿದ್ದರು. ಹಾಕಿ ಇಂಡಿಯಾ (ಎಚ್ಐ) ಆಡಳಿತವು ಕೂಡ ಈಗ ಹಣವಿಲ್ಲ, ಬೇಡಿಕೆ ಈಡೇರಿಸಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿತ್ತು. 
ಅತ್ತ ಆಟಗಾರರು ಇತ್ತ ಆಡಳಿತ ಪಟ್ಟು ಹಿಡಿದು ಕುಳಿತಿದ್ದರಿಂದ ಸಮಸ್ಯೆ ಜಟಿಲವಾಗುತ್ತಾ ಸಾಗಿತ್ತು. ಇಂಥ ಸಂದರ್ಭದಲ್ಲಿ ಆಟಗಾರರಿಗೆ ಎಲ್ಲ ನಿಟ್ಟಿನಿಂದ ಬೆಂಬಲ ದೊರೆಯಿತು. ಧನರಾಜ್ ಪಿಳ್ಳೈ ಸೇರಿದಂತೆ ಅನೇಕ ಮಾಜಿ ಹಾಕಿ ತಾರೆಗಳು ಕೂಡ ಎಚ್ಐ ಆಡಳಿತದ ಜಿಗುಟುತನವನ್ನು ಖಂಡಿಸಿದ್ದರು. 
ರಾಷ್ಟ್ರೀಯ ಕ್ರೀಡೆಯ ಹಿತಕ್ಕೆ ಧಕ್ಕೆ ಆಗಬಾರದು ಹಾಗೂ ಆಟಗಾರರು ನಿರಾತಂಕವಾಗಿ ಮಹತ್ವದ ಚಾಂಪಿಯನ್ಷಿಪ್ಗೆ ಅಭ್ಯಾಸ ನಡೆಸಬೇಕು ಎನ್ನುವ ಉದ್ದೇಶದಿಂದ ಸಹರಾ ಇಂಡಿಯಾ ಪರಿವಾರವು ಆಟಗಾರರಿಗೆ ಸಲ್ಲಬೇಕಾದ ಮೊತ್ತವನ್ನೂ ಬಿಡುಗಡೆ ಮಾಡಿದೆ. 
‘ಈ ವರ್ಷದ ಜನವರಿ 15ರಿಂದ ಏಪ್ರಿಲ್ 14ರವರೆಗಿನ ಅವಧಿಗಾಗಿ ಆಟಗಾರರಿಗೆ ಸಲ್ಲಬೇಕಾದ 77 ಲಕ್ಷ ರೂ. ಮೊತ್ತವನ್ನು ಕಳೆದ ಡಿಸೆಂಬರ್ನಲ್ಲಿಯೇ ಬಿಡುಗಡೆ ಮಾಡಲಾಗಿದೆ. ಆ ವಿಷಯವಾಗ ಹಾಕಿ ಇಂಡಿಯಾ ಜೊತೆಗೆ ಚರ್ಚೆ ಮಾಡಲಾಗುವುದು’ ಎಂದು ಸ್ಪಷ್ಟಪಡಿಸಲಾಗಿದೆ.
ಮಧ್ಯಪ್ರದೇಶ, ಮಹಾರಾಷ್ಟ್ರದಿಂದಲೂ ನೆರವು: ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಕೂಡ ಹಾಕಿ ಆಟಗಾರರ ನೆರವಿಗಾಗಿ ತಲಾ ಒಂದು ಕೋಟಿ ನೀಡುವುದಾಗಿ ಪ್ರಕಟಿಸಿವೆ. 
ಬಜಾಜ್ ಅಲಯನ್ಸ್ನಿಂದ ಎರಡು ಕೋಟಿ: ಬಜಾಜ್ ಅಲಯನ್ಸ್ ಭಾರತ ಹಾಕಿ ತಂಡಕ್ಕೆ ಎರಡು ಕೋಟಿ ರೂ. ನೀಡುವುದಾಗಿ ತಿಳಿಸಿದೆ. 
 
Prajavani
Subscribe to:
Post Comments (Atom)
No comments:
Post a Comment