
ಭಾರತೀಯ ಜನತಾ ಪಕ್ಷವು 2010ರಲ್ಲಿ ಸಾಮಾಜಿಕ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಲಿದ್ದು, ದಲಿತರು, ಅಲ್ಪಸಂಖ್ಯಾತರು ಮತ್ತು ಇತರ ತುಳಿತಕ್ಕೊಳಗಾದ ಕೆಳವರ್ಗವನ್ನು ಪಕ್ಷದ ಮಡಿಲಿಗೆ ತರುವ ಚಳುವಳಿಯನ್ನು ಜಾರಿಗೆ ತರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಸಾಮಾಜಿಕ ಅಭಿವೃದ್ಧಿಯ ಅವಧಿಯೆಂದು 2010ನ್ನು ಬಿಜೆಪಿ ಪರಿಗಣಿಸಲಿದ್ದು, ರಾಷ್ಟ್ರದಾದ್ಯಂತ ಅಭಿಪ್ರಾಯ ಸಂಗ್ರಹಣೆ ಮಾಡಲಾಗುತ್ತದೆ. ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಮಾಜದ ತಳಮಟ್ಟದ ವರ್ಗವನ್ನು ಪಕ್ಷದ ತೆಕ್ಕೆಗೆ ತರುವ ಬಗ್ಗೆ ಬಿಜೆಪಿ ಮಹತ್ವದ ಹೆಜ್ಜೆಯನ್ನಿಡಲಿದೆ ಎಂದು ಉತ್ತರ ಪ್ರದೇಶದ ರಾಮಪುರ ಜಿಲ್ಲೆಯಲ್ಲಿ ಮಾತನಾಡುತ್ತಾ ನಖ್ವಿ ತಿಳಿಸಿದರು.
ಅದೇ ಹೊತ್ತಿಗೆ ಮತದಾರರ ಪಟ್ಟಿಯ ಪರಿಷ್ಕರಣೆ ವಿಚಾರವನ್ನು ನಿರ್ಲಕ್ಷಿಸುತ್ತಿರುವ ಸರಕಾರವನ್ನೂ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಖರ್ಚು ಮಾಡಬೇಕಾದ ಪ್ರತಿ ವಸ್ತುಗಳ ಅಥವಾ ಕಾರ್ಯಗಳ ವೆಚ್ಚ ದ್ವಿಗುಣಗೊಂಡಿದ್ದರೂ, ಸ್ಪರ್ಧೆಗಿಳಿಯುವ ಅಭ್ಯರ್ಥಿಗಳ ವೆಚ್ಚ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿಲ್ಲ. ಹಾಗಾಗಿ ಸ್ಪರ್ಧಾಳುಗಳು ತಮ್ಮ ಖರ್ಚು-ವೆಚ್ಚದ ಕುರಿತು ಸುಳ್ಳು ದಾಖಲೆಗಳನ್ನು ಸಲ್ಲಿಸುತ್ತಾರೆ. ಹಾಗಾಗಿ ಕಪ್ಪು ಹಣದ ಬಳಕೆ ಹಾಗೆ ಉಳಿದು ಬಿಟ್ಟಿದೆ ಎಂದರು.
ಇತ್ತೀಚಿನ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ತೀವ್ರ ಮುಖಭಂಗ ಅನುಭವಿಸುತ್ತಿರುವ ಬಿಜೆಪಿ ಭಾರೀ ಹೊಡೆತ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ದಲಿತರು, ಮುಸ್ಲಿಮರು ಮತ್ತು ಇತರ ಕೆಳವರ್ಗದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ, ಅವರ ವಿಶ್ವಾಸವನ್ನು ಗಳಿಸಿ ಮತ್ತೆ ಜೀವ ಪಡೆದುಕೊಳ್ಳುವ ಆಶಯ ಪಕ್ಷದ್ದು ಎಂದು ಹೇಳಲಾಗಿದೆ.
Source - Webdunia
No comments:
Post a Comment