ಹುಬ್ಬಳ್ಳಿ, ಬುಧವಾರ, 10 ಫೆಬ್ರವರಿ 2010
ಕಳೆದ ವರ್ಷ ಪ್ರೇಮಿಗಳ ದಿನಗಳ ದಿನಾಚರಣೆಯಂದು ಸೆರೆ ಸಿಗುವ ಜೋಡಿಗಳಿಗೆ ಸ್ಥಳದಲ್ಲಿಯೇ ಮದುವೆ ಮಾಡಿಸುವುದಾಗಿ ಎಚ್ಚರಿಕೆ ನೀಡಿ ತೀವ್ರ ವಿವಾದಕ್ಕೆ ಒಳಗಾಗಿದ್ದ ಶ್ರೀರಾಮಸೇನೆ ಈ ಬಾರಿಯೂ ಕೂಡ ತನ್ನ ಅದೇ ವರಸೆಯನ್ನು ಮುಂದುವರಿಸಿದ್ದು, ಈ ಬಾರಿಯೂ ಫೆ.14ರಂದು ಪಾರ್ಕ್, ಕಾಲೇಜ್ ಕ್ಯಾಂಪಸ್, ಗಾರ್ಡನ್ಗಳಲ್ಲಿ ಪ್ರೇಮಿಗಳನ್ನು ಕಂಡಲ್ಲಿ ಅಂತವರಿಗೆ ಉಚಿತ ಮದುವೆ ಮಾಡುವುದಾಗಿ ಘೋಷಿಸಿದೆ.
ಹುಬ್ಬಳ್ಳಿಯಲ್ಲಿ ಬುಧವಾರ ಶ್ರೀರಾಮಸೇನೆ ಸಂಘಟನೆ ಪತ್ರಿಕಾಗೋಷ್ಠಿ ನಡೆಸಿ, ಪ್ರೇಮಿಗಳ ದಿನಾಚರಣೆಯಂದು ಕಾಣ ಸಿಗುವ ಪ್ರೇಮಿಗಳಿಗೆ ಸಂಪ್ರದಾಯಬದ್ದವಾಗಿ ಪೋಷಕರ ಸಮ್ಮುಖದಲ್ಲೇ ಸಿದ್ದಾರೂಢ ಮಠದಲ್ಲಿ ಉಚಿತವಾಗಿ ಮದುವೆ ನೆರವೇರಿಸಲಾಗುವುದು ಎಂದು ತಿಳಿಸಿದೆ.
ವ್ಯಾಲಂಟೈನ್ ಡೇ ಭಾರತೀಯ ಸಂಸ್ಕೃತಿ ಅಲ್ಲ, ಅದು ಪಾಶ್ಚಾತ್ಯ ಸಂಸ್ಕೃತಿ ಎಂದಿರುವ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಪ್ರೇಮ ಕೇವಲ ಒಂದು ದಿನದ ಪ್ರಕ್ರಿಯೆ ಅಲ್ಲ. ಪ್ರೇಮ ಪವಿತ್ರವಾದದ್ದು. ಕೇವಲ ಕಾಮಕ್ಕಾಗಿ, ಮೋಜು ನಡೆಸಲು ವಿದೇಶಿ ಸಂಸ್ಕೃತಿ ಆಚರಿಸುತ್ತಿರುವ ವಿರುದ್ಧ ನಾವು ಜಾಗೃತಿ ಮೂಡಿಸುತ್ತಿರುವುದಾಗಿ ಹೇಳಿದರು.
ಆದರೆ ಪ್ರೇಮಿಗಳ ದಿನಾಚರಣೆಯಂದು ಎಲ್ಲೆಂದರಲ್ಲಿ ಕಾಣ ಸಿಗುವ ಜೋಡಿಗಳನ್ನು ಬಲವಂತವಾಗಿ ಮದುವೆ ಮಾಡಿಸುವಂತಹ ದುಸ್ಸಾಹಕ್ಕೆ ಶ್ರೀರಾಮಸೇನೆ ಹೋಗಲ್ಲ ಎಂದು ಸ್ಪಷ್ಟಪಡಿಸಿರುವ ಮುತಾಲಿಕ್, ಪಾರ್ಕ್, ಕಾಲೇಜ್ ಕ್ಯಾಂಪಸ್, ಗಾರ್ಡನ್ಗಳಲ್ಲಿ ಸೆರೆ ಸಿಗುವ ಪ್ರೇಮಿಗಳಿಗೆ ಉಚಿತ ವಿವಾಹ ನೆರವೇರಿಸಲಾಗುವುದು ಎಂದು ಟಿವಿ9 ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಕಳೆದ ವರ್ಷ ಪ್ರೇಮಿಗಳ ದಿನಾಚರಣೆಯಂದ ಸೆರೆಸಿಗುವ ಜೋಡಿಗಳಿಗೆ ಸ್ಥಳದಲ್ಲೇ ಮದುವೆ ಮಾಡಿಸುವುದಾಗಿ ಎಚ್ಚರಿಕೆ ನೀಡಿದ್ದ ಶ್ರೀರಾಮಸೇನೆಯ ವರಿಷ್ಠ ಮುತಾಲಿಕ್ಗೆ ಪಿಂಕ್ ಚಡ್ಡಿ ಕಳುಹಿಸುವಂತೆ ಪತ್ರಕರ್ತೆ ಸುಸಾನ್ ಕರೆ ನೀಡಿದ್ದು, ಅದರಂತೆ ಫೆ.14ರಂದು ಹುಬ್ಬಳ್ಳಿಯಲ್ಲಿರುವ ಮುತಾಲಿಕ್ ಕಚೇರಿ ತುಂಬಾ ಪಿಂಕ್ ಚಡ್ಡಿಗಳಿಂದಲೇ ತುಂಬಿ ಹೋಗಿತ್ತು. ಆದರೆ ಈ ಬಾರಿ ಯಾರು ಪಿಂಕ್ ಚಡ್ಡಿ ಕಳುಹಿಸಲು ಆಹ್ವಾನ ನೀಡುತ್ತಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
source:webdunia
Feb 11, 2010
Subscribe to:
Post Comments (Atom)
No comments:
Post a Comment