Mar 22, 2010
ಈಗ ಇರುವ ಸ್ಥಿತಿಯಲ್ಲಿ ಕೋಮು ಹಿಂಸೆ ಮಸೂದೆ ಬೇಡ: ಮಸೂದೆಯಲ್ಲಿ ಕೆಲವು ತಿದ್ದುಪಡಿ ಆಗಬೇಕು:ಮುಸ್ಲಿಂ ಕಾನೂನು ಮಂಡಳಿ
ಕೋಮು ಹಿಂಸಾಚಾರ ತಡೆ ಮಸೂದೆಯನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸಿದ್ದು, ಇದು ಮುಸ್ಲಿಮರಿಗೆ ಸಮಸ್ಯೆಗೆ ಕಾರಣವಾಗುವುದರಿಂದ ಇದನ್ನು ಹಿಂತೆಗೆದುಕೊಳ್ಳಬೇಕು ಇಲ್ಲವೇ ಕರಡು ತಿದ್ದುಪಡಿಯಾಗಬೇಕು ಎಂದು ಆಗ್ರಹಿಸಿ 'ಲಖನೌ ಘೋಷಣೆ' ಹೊರಡಿಸಿದೆ.ಇದರೊಂದಿಗೆ, ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ವೃದ್ಧಿಯ ಕ್ರಮಗಳನ್ನೂ ಮಂಡಳಿ ವಿರೋಧಿಸಿದೆ.ಇಲ್ಲಿನ ನದ್ವತುಲ್ ದಾರುಲ್ ಉಲೂಮ್ ಇಸ್ಲಾಮಿಕ್ ವಿವಿಯಲ್ಲಿ ನಡೆದ ತ್ರಿದಿನ ವಾರ್ಷಿಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಇದನ್ನು ಘೋಷಿಸಿರುವ ಮಂಡಳಿ ವಕ್ತಾರ ಮೌಲಾನಾ ಅಬ್ದುಲ್ ರಹೀಮ್ ಖುರೇಶಿ, ಇಸ್ರೇಲ್ ಜೊತೆಗೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದವನ್ನೂ ಮಾಡಿಕೊಂಡಿರುವ ಭಾರತದ ಕ್ರಮಗಳು ಮತ್ತು ಆ ದೇಶದೊಂದಿಗೆ ಮೈತ್ರಿ ಹೆಚ್ಚಿಸುವ ಕ್ರಮಗಳನ್ನು ಮಂಡಳಿ ಆಕ್ಷೇಪಿಸುತ್ತದೆ ಎಂದರು.ಅಂತಾರಾಷ್ಟ್ರೀಯ ಭಯೋತ್ಪಾದನೆ ಬಗ್ಗೆ ಉಲ್ಲೇಖಿಸಿದ ಅವರು, "ನಾವು ಭಯೋತ್ಪಾದನೆಯನ್ನು ವಿರೋಧಿಸುತ್ತೇವೆ. ಆದರೆ ಶಂಕಿತ ಉಗ್ರಗಾಮಿಗಳೆಂದು ಮುಸ್ಲಿಂ ಯುವಕರನ್ನು ಹಿಡಿದು ಬಂಧಿಸುತ್ತಿರುವುದಕ್ಕೆ ಮತ್ತು ಮೂರನೇ ದರ್ಜೆಯ ಶಿಕ್ಷೆ ನೀಡುತ್ತಿರುವುದಕ್ಕೆ ನಮ್ಮ ವಿರೋಧವಿದೆ" ಎಂದಿದ್ದಾರೆ.ಮಂಡಳಿಯ ಕಾನೂನು ಸಲಹೆಗಾರ ಝಾಫರಿಯಾಬ್ ಜಿಲಾನಿ ಮಾತನಾಡಿ, ಈಗಿರುವ ರೂಪದಲ್ಲಿ ಈ ಮಸೂದೆಯ ಕೆಲವು ವಿಧಿಗಳಿಗೆ ನಮ್ಮ ಗಂಭೀರ ಆಕ್ಷೇಪವಿದೆ. ಕೋಮು ಹಿಂಸಾಚಾರ ತಡೆ ಕರಡು ಮಸೂದೆಯಲ್ಲಿ ಪೊಲೀಸರಿಗೆ ಮತ್ತು ಮ್ಯಾಜಿಸ್ಟ್ರೇಟರಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತದೆ. ಇದುವರೆಗಿನ ಕೋಮು ಹಿಂಸಾಚಾರ ಘಟನೆಗಳ ಕುರಿತು ವರದಿ ಸಲ್ಲಿಸಿರುವ ಹಲವಾರು ಆಯೋಗಗಳು, ಪೊಲೀಸರು ಮುಸಲ್ಮಾನರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದೇ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ, ನಾವು ಮತ್ತಷ್ಟು ಆತಂಕದಿಂದ ಬಾಳಬೇಕಾಗುತ್ತದೆ. ಈ ಕಾರಣಕ್ಕೆ ನಾವು ಇದರ ತಿದ್ದುಪಡಿಗೆ ಆಗ್ರಹಿಸುತ್ತಿರುವುದಾಗಿ ಜಿಲಾನಿ ಹೇಳಿದರು.ಈ ಬಗ್ಗೆ ಎಲ್ಲ ಮುಸಲ್ಮಾನ ಸಂಸದರನ್ನು ಸಂಸತ್ತಿನಲ್ಲಿ ಒಗ್ಗೂಡಿಸಲು ಮಂಡಳಿಯು ಪ್ರಯತ್ನಿಸಲಿದೆ. ಆದರೆ, ಮುಸ್ಲಿಮರ ವ್ಯಕ್ತಿಗತ ಕಾನೂನುಗಳಿಗೆ ಸಂಬಂಧಿಸಿದ ಮಹತ್ವದ ವಿಷಯಗಳ ಬಗ್ಗೆ ಮಂಡಳಿ ಸಮಾವೇಶದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಮಹಿಳಾ ಮೀಸಲಾತಿ ಮಸೂದೆ ಕುರಿತಾಗಿಯೂ ಯಾವುದೇ ಚರ್ಚೆ ನಡೆದಿಲ್ಲ. ಮೂರು ಬಾರಿ ತಲಾಕ್ ಉಚ್ಚರಿಸಿ ವಿಚ್ಛೇದನ ನೀಡುವ ಮುಸ್ಲಿಂ ಕಾನೂನಿನ ಬಗ್ಗೆ ಏನಾದರೂ ಚರ್ಚೆ ನಡೆಯಿತೇ ಎಂದು ಪತ್ರಕರ್ತರು ಕೇಳಿದಾಗ, 'ಅದು ನಮ್ಮ ಅಜೆಂಡಾದಲ್ಲೇ ಇರಲಿಲ್ಲ' ಎಂದು ಜಿಲಾನಿ ನುಡಿದರು.
Subscribe to:
Post Comments (Atom)
No comments:
Post a Comment