
ಮಂಗಳೂರು: ನೂತನವಾಗಿ ರಚಿತವಾದ ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯಾದ್ಯಂತ ೬೫ ಸ್ಥಾನಗಳನ್ನು ಪಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೩೯ ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದೆ.
ಹಲವು ಕಡೆ ಸ್ಪರ್ಧಿಸಿದ್ದ ಎಸ್.ಡಿ.ಪಿ.ಐ ಅಭ್ಯರ್ಥಿಗಳು ಕೆಲವು ಮತಗಳ ಅಂತರದಿಂದ ಪರಾಭವಗೊಂಡಿರುವುದುಸಹ ಅಲ್ಲಲ್ಲಿ ನಡೆದಿದೆ. ಅರ್ಕುಳ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ. ಅಭ್ಯರ್ಥಿ ಕೇವಲ ೪ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ಎಸ್.ಡಿ.ಪಿ.ಐ. ಪ್ರಾಭಲ್ಯ ಹೊಂದಿರುವ ಬಹುನಿರೀಕ್ಷಿತ ಪಾವೂರು ಪಂಚಾಯಿತಿಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ೮ ಅಭ್ಯರ್ಥಿಗಳು ಪರಾಭವಗೊಂಡಿದ್ದು ಇದಕ್ಕೆ ಇಲ್ಲಿ ಕಾಂಗ್ರೆಸ್ಸ್ ಮತ್ತು ಬಿ.ಜೆ.ಪಿ , ಸಿ.ಪಿ.ಎಂ. ಮಾಡಿಕೊಂಡ ಒಳ ಮೈತ್ರಿ ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೆ ಕಾಂಗ್ರೆಸ್ಸಿನ ಪ್ರಭಾವಿ ಹಾಗೂ ಹಿರಿಯ ನಾಯಕರೊಬ್ಬರು ಕೊನೆ ಕ್ಷಣದಲ್ಲಿ ನಡೆಸಿದ ಮನೆ ಮನೆ ಭೇಟಿ ಇಲ್ಲಿ ಫಲಿತಾಂಶವನ್ನು ಬದಲಾಯಿಸಿತು ಎಂದು ಸಹ ಹೇಳಲಾಗುತ್ತಿದೆ.
ಎಸ್.ಡಿ.ಪಿ.ಐ. ಸ್ಪರ್ಧೆಯಿಂದ ಬಿ.ಜೆ.ಪಿ. ಗೆ ಲಾಭ ಎಂದು ಹೇಳುತಿದ್ದ ಕಾಂಗ್ರೆಸ್ಸಿಗರು ಇದೀಗ ಎಸ್.ಡಿ.ಪಿ.ಐ. ಸ್ಪರ್ಧೆಯ ಕಾರಣ ಹೆಚ್ಚು ಲಾಭ ಪಡೆದಿದ್ದಾರೆ. ಬಿ.ಜೆ.ಪಿ. ಅಲೆಯ ನಡುವೆಯೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಒಟ್ಟಿನಲ್ಲಿ ಎಸ್.ಡಿ.ಪಿ.ಐ. ಸ್ಪರ್ಧಿಸಿದರೆ ಕೋಮುವಾದಿ ಪಕ್ಷಗಳು ಅಧಿಕಾರ ಪಡೆಯುತ್ತವೆ ಎಂಬ ಪ್ರಚಾರವನ್ನು ಈ ಫಲಿತಾಂಶ ಸುಳ್ಳು ಮಾಡಿದೆ.
No comments:
Post a Comment