ಬೆಂಗಳೂರು, ಬುಧವಾರ, 6 ಜನವರಿ 2010: ತೀವ್ರ ಕುತೂಹಲ ಕೆರಳಿಸಿದ್ದ ಮತ್ತೊಂದು ಲವ್ ಜಿಹಾದ್ ಎಂದು ಹೇಳಲಾಗುತ್ತಿದ್ದ ಪ್ರಕರಣವೊಂದು ಕೊನೆಗೂ ತಣ್ಣಗಾಗಿದೆ. ಕಾಣೆಯಾಗಿದ್ದಾಳೆ ಪತ್ತೆ ಹಚ್ಚಿ ಎಂದು ಹಲವು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವಂತೆ ಹೇಳಿಕೆ ನೀಡಿರುವ ರಮ್ಯಾ ಶೆಟ್ಟಿ ಎಂಬಾಕೆ, ತನ್ನನ್ನು ಬಲವಂತವಾಗಿ ಯಾರೂ ಮತಾಂತರಗೊಳಿಸಿಲ್ಲ, ನನ್ನಿಚ್ಛೆಯಂತೆ ಮದುವೆಯಾಗಿದ್ದೇನೆ ಎಂದಿದ್ದಾಳೆ.
ನನ್ನ ಸಹೋದರಿಯನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ. ಇದು ಲವ್ ಜಿಹಾದ್ ಪ್ರಕರಣ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದ ರಮ್ಯಾ ಕುಟುಂಬ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿತ್ತು. ಮಂಗಳವಾರ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯವು, ಸ್ವತಃ ರಮ್ಯಾ ಹೇಳಿಕೆಯನ್ನಾಧರಿಸಿ ಪ್ರಕರಣಕ್ಕೆ ತೆರೆ ಎಳೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನರಿಂಗಾನದ ಪುಟ್ಟೊಳಿಕೆ ಎಂಬಲ್ಲಿನ ರಮ್ಯಾ ಶೆಟ್ಟಿ ಎಂಬ ಹದಿಹರೆಯದ ಯುವತಿ ಮೊಹಮ್ಮದ್ ಎಂಬ ಮೂರು ಮಕ್ಕಳ ತಂದೆಯನ್ನು ವಿವಾಹವಾಗಿದ್ದನ್ನು ಪ್ರಶ್ನಿಸಿದ ಹೆತ್ತವರು, ನ್ಯಾಯಾಲಯದ ಮೊರೆ ಹೋಗಿದ್ದರು.
ಆದರೆ ನ್ಯಾಯಾಲಯದಲ್ಲಿ ರಮ್ಯಾ ಹೇಳಿಕೆಯನ್ನು ವಿವರಿಸಿರುವ ಪೊಲೀಸರು, ತನ್ನನ್ನು ಮೊಹಮ್ಮದ್ ಬಲವಂತವಾಗಿ ಮತಾಂತರಗೊಳಿಸಿಲ್ಲ. ನಾನು ಆತನನ್ನು ಪ್ರೇಮಿಸಿ ಮದುವೆಯಾಗಿದ್ದೇನೆ ಎಂದು ಹೇಳಿದ್ದಾಳೆಂದು ತಿಳಿಸಿದ್ದಾರೆ. ಹಾಗಾಗಿ ಅರ್ಜಿಯನ್ನು ಮುಂದುವರಿಸುವುದು ಉಚಿತವಲ್ಲ ಎಂದು ನ್ಯಾಯಾಲಯ ನಿರ್ಧರಿಸಿದೆ.
ಮೊಹಮ್ಮದ್ ರಮ್ಯಾಳನ್ನು ಅಪಹರಿಸಿದ್ದಾನೆ. ಈ ಬಗ್ಗೆ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರೂ ಪೊಲೀಸರಿಗೆ ಆಕೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಹಲವಾರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಜರಂಗ ದಳ, ವಿಶ್ವ ಹಿಂದೂ ಪರಿಷತ್ ಮುಂತಾದ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು. ಮಂಗಳವಾರ ಮುಡಿಪುವಿನಲ್ಲಿ ಪ್ರತಿಭಟನೆ ನಡೆದಿರುವ ಬಗ್ಗೆ ವರದಿಯಾಗಿದೆ
source: webdunia
Jan 6, 2010
Subscribe to:
Post Comments (Atom)
No comments:
Post a Comment