VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 6, 2010

ಸಮರವೀರ ಶತಕ; ಸಿಂಹಳೀಯರಿಗೆ ಐದು ವಿಕೆಟ್‌ಗಳ ಜಯ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಮಂಗಳವಾರ ಭಾರತ ವಿರುದ್ಧ ನಡೆದ ಪಂದ್ಯವನ್ನು ಶ್ರೀಲಂಕಾ, ತಿಲನ್ ಸಮರವೀರ ಬಾರಿಸಿದ ಅಜೇಯ ಶತಕದ (105) ನೆರವಿನಿಂದ ಐದು ವಿಕೆಟ್‌ಗಳಿಂದ ಗೆದ್ದುಕೊಂಡಿದೆ.

ಗೆಲ್ಲಲ್ಲು 280ರ ಸವಾಲಿನ ಮೊತ್ತ ಪಡೆದ ಲಂಕಾ ಇನ್ನೂ 12 ಎಸೆತಗಳನ್ನು ಉಳಿದಿರುವಂತೆಯೇ ವಿಜಯದ ಗೆರೆ ದಾಟಿತು. ಆಕರ್ಷಕ ಶತಕ ಬಾರಿಸಿದ ಸಮರವೀರ ಪಂದ್ಯ ಪುರಸ್ಕೃತರಾದರು.

ಸಮರವೀರಗೆ ಉತ್ತಮ ಬೆಂಬಲ ನೀಡಿದ ನಾಯಕ ಕುಮಾರ ಸಂಗಕ್ಕರ (60) ಹಾಗೂ ತಿಸಾರಾ ಪರೇರಾ (ಅಜೇಯ 36) ತಂಡದ ಗೆಲುವನ್ನು ಸುಲಭಗೊಳಿಸಿದರು.

ತಿಲಕರತ್ನೆ ದಿಲ್‌ಶಾನ್ ಅನುಪಸ್ಥಿತಿಯಲ್ಲೂ ಲಂಕಾ ಆರಂಭ ಉತ್ತಮವಾಗಿತ್ತು. ಆರಂಭಿಕ ಉಪುಲ್ ತರಂಗ (30) ಹಾಗೂ ತಿರಿಮಣ್ಣೆ (22) ಸೇರಿ ಮೊದಲ ವಿಕೆಟ್‌ಗೆ 48 ರನ್ ಒಟ್ಟು ಸೇರಿಸಿದರು. ಆದರೆ ಇವರಿಬ್ಬರನ್ನು ತಂಡ ಬಹುಬೇಗನೆ ಕಳೆದುಕೊಂಡಿತು.

ನಂತರ ಬಂದ ನಾಯಕ ಸಂಗಕ್ಕರ ಹಾಗೂ ಸಮರವೀರ ತಂಡವನ್ನು ಮುನ್ನಡೆಸಿದರು. ಮೂರನೇ ವಿಕೆಟ್‌ಗೆ ಅಮೂಲ್ಯ 122 ರನ್ ಜೊತೆಯಾಟ ನೀಡಿದ ಈ ಜೋಡಿ ಪರಿಸ್ಥಿತಿಗೆ ತಕ್ಕ ಆಟವಾಡಿದರು.

106 ಎಸೆತಗಳನ್ನು ಎದುರಿಸಿದ ಸಮರವೀರ 11 ಬೌಂಡರಿಗಳ ನೆರವಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಶತಕ ಬಾರಿಸಿದರು. ಇದು ಏಕದಿನದಲ್ಲಿ ಅವರ ಅತ್ಯಧಿಕ ಮೊತ್ತ ಕೂಡಾ ಆಗಿದೆ.

ಸಮರವೀರಗೆ ಸಾಥ್ ನೀಡಿದ ನಾಯಕ ಸಂಗಕ್ಕರ 80 ಎಸೆತಗಳಲ್ಲಿ ನಾಲ್ಕು ಬೌಂಡರಿಗಳಿಂದ 60 ರನ್ ಗಳಿಸಿದರು.

ಆದರೆ ಸಂಗಕ್ಕರ ಮರಳಿದ ಕೂಡಲೇ ಕಂದಾಂಬಿ (8) ಹಾಗೂ ರಣಧೀವ್‌ರನ್ನು (4) ತಂಡ ಬೇಗನೆ ಕಳೆದುಕೊಳ್ಳುವ ಮೂಲಕ ಕೆಲವು ಆತಂಕದ ಕ್ಷಣಗಳನ್ನು ಎದುರಿಸಿದರೂ ಅಂತಿಮ ಹಂತದಲ್ಲಿ ಪರೇರಾ ಬಿರುಸಿನ ಆಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಕೇವಲ 15 ಎಸೆತಗಳನ್ನು ಎದುರಿಸಿದ ಪರೇರಾ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 36 ರನ್ ಗಳಿಸಿದರು.

ಭಾರತದ ಪರ ಹರಭಜನ್ ಸಿಂಗ್ ಮೂರು ಹಾಗೂ ಶ್ರೀಶಾಂತ್ ಒಂದು ವಿಕಟ್ ಕಿತ್ತರು.

ಇದೀಗ ಆಡಿರುವ ಎರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಶ್ರೀಲಂಕಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ಹಾಗೂ ಬಾಂಗ್ಲಾದೇಶ ನಡುವಣ ಸರಣಿಯ ಮುಂದಿನ ಪಂದ್ಯ ಗುರುವಾರ ನಡೆಯಲಿದೆ.
ಸಿಂಹಳೀಯರಿಗೆ 280 ರನ್ನುಗಳ ಗೆಲುವಿನ ಗುರಿ

No comments: