ಕುಂದಾಪುರ: ವಿದ್ಯಾರ್ಥಿಗೆ ತಂಡದಿಂದ ಹಲ್ಲೆ
ಕುಂದಾಪುರ, ಫೆ.೧೬: ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಡ್ಡಗಟ್ಟಿದ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ಇಲ್ಲಿನ ಗೀತಾಂಜಲಿ ಟಾಕೀಸು ಬಳಿ ಇಂದು ಬೆಳಗ್ಗೆ ನಡೆದಿದೆ.
ತಲ್ಲೂರು ನಿವಾಸಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಬಿಬಿಎಂ ವಿದ್ಯಾರ್ಥಿ ಜಾಕ್ಸನ್ ಡಿಸಿಲ್ವ(೨೩) ಎಂಬಾತನೇ ಹಲ್ಲೆಗೊಳಗಾದ ವಿದ್ಯಾರ್ಥಿ. ಜಾಕ್ಸನ್ ಕಾಲೇಜಿಗೆ ತೆರಳುತ್ತಿದ್ದ ವೇಳೆ ಮೂವರು ಯುವಕರು ದೊಣ್ಣೆಯಿಂದ ಹಲ್ಲೆ ನಡೆಸಿದರು ಎನ್ನಲಾಗಿದೆ.
ಹಲ್ಲೆಯಿಂದ ಜಾಕ್ಸನ್ರ ಕಾಲು ಜಖಂಗೊಂಡಿದ್ದು, ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೆ ಕಾರಣ ತಿಳಿದುಬಂದಿಲ್ಲ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು: ಪತಿಯ ಸಾವಿನ ಬಗ್ಗೆ ಪತ್ನಿಯ ಶಂಕೆ
ಪುತ್ತೂರು, ಫೆ.೧೬: ಇಲ್ಲಿನ ಸಾಲ್ಮರ ಕೊಟೇಚಾ ಹಾಲ್ ಬಳಿ ಇತ್ತೀಚೆಗೆ ಶವವಾಗಿ ಪತ್ತೆಯಾಗಿದ್ದ ಪೆರ್ಲದ ಗೋಪಾಲ ಕೃಷ್ಣ ಎಂಬವರ ಸಾವಿನ ಕುರಿತು ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಇದೊಂದು ಸಂಶಯಾಸ್ಪದ ಸಾವು ಎಂದು ತಿಳಿಸಿ ತನಿಖೆಗೆ ಒತ್ತಾಯಿಸಿದ್ದಾರೆ.
ಫೆ.೧೨ರಂದು ಗೋಪಾಲಕೃಷ್ಣರ ಮೃತದೇಹ ಪತ್ತೆಯಾಗಿತ್ತು. ಅವರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ಪ್ರಕರಣ ದಾಖಲಾಗಿತ್ತು. ಮೃತರ ಪತ್ನಿ ಪ್ರಸ್ತುತ ಮಡಿಕೇರಿಯ ಕಾರ್ಪೊರೇಷನ್ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿರುವ ಪೆರ್ಲ ನಿವಾಸಿ ಚಂದ್ರಾವತಿ ಎಂಬವರು ಇದೀಗ ನಗರ ಪೊಲೀಸರಿಗೆ ದೂರು ನೀಡಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಓರ್ವನ ಬಂಧನ: ದೂರಿಗೆ ಸಂಬಂಧಿಸಿ ಪುರಸಭಾ ವ್ಯಾಪ್ತಿಯ ನೆಲ್ಲಿಕಟ್ಟೆಯ ಬಾಲಕೃಷ್ಣ ಯಾನೆ ರಾಜೇಶ್ ನಾಕ್ ಎಂಬವರನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಗೋಪಾಲಕೃಷ್ಣ ಮತ್ತು ಬಾಲಕೃಷ್ಣರ ನಡುವೆ ಜಗಳ ನಡೆದಿದೆ ಎಂದು ಚಂದ್ರಾವತಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಾಲಕೃಷ್ಣರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Source - VB
Subscribe to:
Post Comments (Atom)
No comments:
Post a Comment