ಮುಸ್ಲಿಮರು ಉದಾರಿಗಳಾಗಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ಸಹಕರಿಸಬೇಕು, ನಮ್ಮ ಜೀವ ಅಲ್ಲಿದೆ ಎಂದೆಲ್ಲಾ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಮನವಿ ಮಾಡಿದ್ದ ಬಿಜೆಪಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಬಿಜೆಪಿಯ ಆತ್ಮ ಕೇವಲ ಅಧಿಕಾರದ ಲಾಲಸೆಗೆ ಮಾತ್ರ ಎಂದಿದೆ.
ಹಿಂದೂಗಳ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯವು ಉದಾರಿಗಳಾಗುವ ಮೂಲಕ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಮುಸ್ಲಿಮರಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮನವಿ ಮಾಡಿಕೊಂಡಿದ್ದರು.
ಬಿಜೆಪಿಯ ಆತ್ಮ ಕೇವಲ ಅಧಿಕಾರ ಲಾಲಸೆಗಾಗಿ. ಅದು ಆರು ವರ್ಷಗಳ ಕಾಲ ಆಡಳಿತ ನಡೆಸಿದ ಉದಾಹರಣೆ ನಮ್ಮ ಮುಂದಿದೆ. ಅಧಿಕಾರದ ಲಾಲಸೆ ಹೊರತುಪಡಿಸಿ ಬಿಜೆಪಿ ಯಾವುದೇ ಇತರ ಸೈದ್ದಾಂತಿಕ ಬದ್ಧತೆಗಳನ್ನು ಹೊಂದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ಸರಕಾರ ದೇಶದಲ್ಲಿರುವಾಗ ಪಾಕಿಸ್ತಾನದ ಜತೆ ಮಾತುಕತೆ ನಡೆಸುವ ವಿಚಾರವನ್ನು ವಿರೋಧ ಪಕ್ಷಗಳ ಜತೆ ಯಾಕೆ ಚರ್ಚಿಸುತ್ತಿಲ್ಲ ಎಂದು ನರೇಂದ್ರ ಮೋದಿ ಪ್ರಶ್ನಿಸಿರುವುದಕ್ಕೆ ಉತ್ತರಿಸಿದ ತಿವಾರಿ, ಪ್ರಜಾಪ್ರಭುತ್ವಕ್ಕೆ ಗುಜರಾತ್ ಮುಖ್ಯಮಂತ್ರಿಯೇ ಅವಮಾನ ಎಂದರು.
ನರೇಂದ್ರ ಮೋದಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆಯೇ? ರಾಜ್ಯವನ್ನು ಸಂಪೂರ್ಣ ಫ್ಯಾಸಿಸ್ಟ್ ಮನೋಭಾವದಿಂದ ಮುನ್ನಡೆಸುತ್ತಿರುವ, ಸ್ವತಂತ್ರ ಭಾರತದಲ್ಲಿ ಅತ್ಯಂತ ಭೀಕರವಾಗಿ ಅಲ್ಪಸಂಖ್ಯಾತರ ನರಹತ್ಯೆ ಮಾಡಿದ್ದ ವ್ಯಕ್ತಿಗೆ ಪ್ರಜಾಪ್ರಭುತ್ವ ಎನ್ನುವ ಶಬ್ದವನ್ನು ಬಳಸುವ ಅಧಿಕಾರ ಇದೆಯೆಂದು ನನಗೆ ಅನ್ನಿಸುತ್ತಿಲ್ಲ. ಅವರು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಒಂದು ಅಪವಾದ ಎಂದು ತಿವಾರಿ ಗಂಭೀರ ಆರೋಪಗಳನ್ನು ಮಾಡಿದರು.
ಮುಂಬೈ ದಾಳಿಯ ನಂತರ ಸ್ಥಗಿತಗೊಂಡಿದ್ದ ಮಾತುಕತೆಗೆ ಮರುಜೀವ ನೀಡಲು ಭಾರತ ನಿರ್ಧರಿಸಿದ್ದು, ಈ ಸಂದರ್ಭದಲ್ಲಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಮೋದಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.
source:webdunia
Feb 19, 2010
Subscribe to:
Post Comments (Atom)
No comments:
Post a Comment