22 ಮೃತ ದೇಹಗಳ ಡಿಎನ್ಎ ಪರೀಕ್ಷೆ
ಮಂಗಳೂರು,ಮೇ 23: ನಗರ ಹೊರವಲಯದ ಬಜ್ಪೆ ಕೆಂಜಾರಿನಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟ 158 ಮಂದಿಯ ಪೈಕಿ 136 ಮಂದಿಯ ಗುರುತು ಸಿಕ್ಕಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
ಇಂದು ರಾತ್ರಿ ವೆನ್ಲಾಕ್ ಶವಾಗಾರದ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಶನಿವಾರ ರಾತ್ರಿ 72 ಮೃತದೇಹಗಳ ಗುರುತು ಪತ್ತೆಯಾಗಿದ್ದರೆ, ರವಿವಾರ 64 ಮೃತದೇಹಗಳ ಗುರುತು ಪತ್ತೆಯಾಗಿದೆ. ಈ ಎಲ್ಲ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
22 ಮಂದಿಯ ಡಿಎನ್ಎ ಪರೀಕ್ಷೆ
22 ಮೃತದೇಹಗಳ ಗುರುತು ಪತ್ತೆ ಹಚ್ಚಲು ಕುಟುಂಬಸ್ಥರಿಗೆ ಕಷ್ಟವಾಗಿದೆ. ಮೃತದೇಹಗಳ ಡಿಎನ್ಎ ಪರೀಕ್ಷೆ ನಡೆಸಿ ವಾರದೊಳಗೆ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ಮುಗಿಸಲಾಗುವುದು ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
ಶನಿವಾರ ದುಬೈಯಿಂದ ಬಜ್ಪೆಗೆ ಬಂದ ವಿಮಾನದಲ್ಲಿ 6 ಮಂದಿ ಸಿಬ್ಬಂದಿಗಳ ಸಹಿತ ಒಟ್ಟು 166 ಮಂದಿ ಇದ್ದರು. ಆ ಪೈಕಿ 8 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರೆ, 158 ಮಂದಿ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.ಈ ಸಂದರ್ಭ ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಿಂದ ನಿಯುಕ್ತಿಗೊಂಡ ವಿಶೇಷ ನೋಡಲ್ ಅಧಿಕಾರಿ ಯೋಗೀಂದ್ರ ತ್ರಿಪಾಠಿ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ಕಾಸರಗೋಡು ಜಿಲ್ಲಾಧಿಕಾರಿ ಆನಂದ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
Subscribe to:
Post Comments (Atom)
No comments:
Post a Comment