
ಮುಂಬೈ, ಮೇ 23: ಆಕರ್ಷಕ ಸಮವಸ್ತ್ರ ಧರಿಸಿ, ಚೆನ್ನಾಗಿ ಕಾಣಿಸಿಕೊಂಡು ಜಗತ್ತಿನಾದ್ಯಂತ ಹಾರಾಡಬೇಕೆಂಬ ತೇಜಲ್ ಕಮುಲ್ಕರ್ಳ ಗಗನ ಸಖಿಯಾಗುವ ಕನಸು ನನಸಾಗಿತ್ತು. ಆದರೆ ಡೊಂಬಿವಿಲಿ ನಿವಾಸಿಯಾಗಿದ್ದ 25ರ ಹರೆಯದ ತೇಜಲ್ ಗಗನ ಸಖಿಯಾಗಿ ಮಂಗಳೂರಿನಲ್ಲಿ ಸೇವೆಗೆ ನಿಯೋಜಿತಳಾಗಿ, ಮೂರು ತಿಂಗಳಲ್ಲೇ ತನ್ನ ಕನಸನ್ನು ಭಗ್ನಗೊಳಿಸಿ ಸಾವಿನ ಮನೆ ಸೇರುವಂತಾಯಿತು.
ಶನಿವಾರ ತಡರಾತ್ರಿಯವರೆಗೂ ತೇಜಲ್ ಸಾವಿನ ಕುರಿತು ಸೂಕ್ಷ್ಮ ಸ್ವಭಾವದ ಆಕೆಯ ತಾಯಿ ಭಾರತಿಗೆ ಮಾಹಿತಿಯಿರಲಿಲ್ಲ.
ಸಾಮಾನ್ಯವಾಗಿ ವಿಮಾನದಿಂದ ಇಳಿದ ಮತ್ತು ವಿಮಾನ ಹೊರಡುವ ವೇಳೆ ತನ್ನ ಮಗಳಿಂದ ದಿನಾ ಬರುವ ದೂರವಾಣಿ ಕರೆಗಾಗಿ ಭಾರತಿ ಕಾಯುತ್ತಿದ್ದರು. ವಿಶೇಷವೆಂದರೆ, ದುಬೈಯಿಂದ ವಿಮಾನ ಹೊರಡುವ ವೇಳೆ, ಇದೇ ಮೊದಲ ಬಾರಿಗೆ ತೇಜಲ್ ತನ್ನ ತಾಯಿಗೆ ದೂರವಾಣಿ ಕರೆ ಮಾಡಿರಲಿಲ್ಲ.
ತೇಜಲ್ ದೂರವಾಣಿ ಕರೆ ಮಾಡಬಹುದು ಎಂದು ಭಾರತಿ ಇನ್ನೂ ನಿರೀಕ್ಷಿಸುತ್ತಿದ್ದಾರೆ ಎಂದು ಕಮುಲ್ಕರ್ರ ಸ್ನೇಹಿತರೊಬ್ಬರು ಹೇಳುತ್ತಾರೆ. ಕಳೆದ 5ರಂದು ಮನೆಯಲ್ಲೇ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದ ತೇಜಲ್, ಮೈನೆ ಪ್ಯಾರ್ ಕಿಯಾ ಮತ್ತು ಜಬ್ ವೀ ಮೆಟ್ ಚಿತ್ರಗಳ ಅಭಿಮಾನಿಯಾಗಿದ್ದಳು. ರಿಯಾಲಿಟಿ ಶೋಗಳ ಬಗ್ಗೆ ಆಕೆಗೆ ಅತೀವ ಆಸಕ್ತಿಯಿತ್ತು ಎಂದು ಆಕೆಯ ಸಾಮಾಜಿಕ ತಾಣದಲ್ಲಿ ತಿಳಿಯುತ್ತದೆ.

ಆಕೆ ಭಾರತೀಯ ಆಹಾರವನ್ನು ಹೆಚ್ಚು ಬಯಸುತ್ತಿದ್ದಳು ಮತ್ತು ಆಕೆ ಕಳೆದುಕೊಳ್ಳಲಿಚ್ಛಿಸದ ಐದು ವಿಷಯಗಳೆಂದರೆ, ‘‘ಕುಟುಂಬ, ದೇವರ ಪ್ರಾರ್ಥನೆ, ಧ್ಯಾನ, ನೀರು ಮತ್ತು ಸ್ನೇಹಿತರು’’ ಎಂದು ತನ್ನ ಸಾಮಾಜಿಕ ತಾಣದಲ್ಲಿ ತಿಳಿಸಿದ್ದಳು.
ಕ್ರಿಕೆಟ್ ಮತ್ತು ಫುಟ್ಬಾಲ್ ಆಟದಲ್ಲಿ ತೇಜಲ್ಗೆ ತೀವ್ರ ಆಸಕ್ತಿಯಿತ್ತು. ತಾನು ಚತುರತೆಯನ್ನು ಹೊಂದಿರುವ ಆತ್ಮೀಯ ಹುಡುಗಿ ಎಂದೆಲ್ಲ ಸಾಮಾಜಿಕ ತಾಣದಲ್ಲಿ ಆಕೆ ತನ್ನ ಬಗ್ಗೆ ವಿವರಿಸಿದ್ದಳು.
ಗಗನ ಸಖಿಯಾಗುವುದು ತೇಜಲ್ಳ ಬಾಲ್ಯದ ಕನಸಾಗಿತ್ತು ಎಂದು ಡೊಂಬಿ ವಿಲಿಯ ಆಕೆಯ ಮನೆಯ ನೆರೆಮನೆ ನಿವಾಸಿ ಪ್ರಜ್ಞಾ ಲಿಲಿ ಹೇಳುತ್ತಾಳೆ. ಡೊಂಬಿವಿಲಿಯ ಮಾಡೆಲ್ ಕಾಲೇಜಿನಲ್ಲಿ ತೇಜಲ್, ವಾಣಿಜ್ಯ ಪದವಿಯನ್ನು ಪಡೆದಿದ್ದಳು. ಗಗನ ಸಖಿ ಅಕಾಡಮಿಯಲ್ಲಿ ಆಕೆ ತರಬೇತಿಯನ್ನು ಪಡೆದು, ಏರ್ ಇಂಡಿಯಾಗೆ ಸೇರಿಕೊಂಡಿದ್ದಳು.
‘‘ಮೇ 5ರಂದು ನಾವು ಆಕೆಯ 25ನೆ ಹುಟ್ಟು ಹಬ್ಬವನ್ನು ಆಚರಿಸಿದ್ದೆವು. ಆದರೆ ಇಂದು ಅವಳು ನಮ್ಮೆಂದಿಗಿಲ್ಲ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ, ಆದರೆ ವಿಧಿಯನ್ನು ನಾವು ಮೀರಲಾಗುವುದಿಲ್ಲ’’ ಎಂದು ಸಂಬಂಧಿಕರೊಬ್ಬರು ಹೇಳುತ್ತಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ತೇಜಲ್ಳ ತಂದೆ ಅನಿಲ್, ತನ್ನ ಮಗಳ ಮೃತ ದೇಹವನ್ನು ಪಡೆಯಲು ಮಂಗಳೂರಿಗೆ ತೆರಳಿದ್ದಾರೆ.
No comments:
Post a Comment