ಆಡಳಿತಾರೂಢ ಜನಪ್ರತಿನಿಧಿಗಳ ವಿರುದ್ಧ ನೀಡಿರುವ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದು, ಜನಸಾಮಾನ್ಯರ ಬಗ್ಗೆ ನಿರ್ಲಕ್ಷ್ಯ ತೋರಿರುವ ರಾಜಕಾರಣಿಗಳನ್ನು ಒದೆಯಿರಿ ಅಂತ ಯಾಕೆ ಹೇಳಬಾರದು ಎಂದು ಪ್ರಶ್ನಿಸಿದ್ದಾರೆ.
ಅವರು ಕೆ.ಆರ್.ನಗರದ ಸಾಲಿಗ್ರಾಮ ಸಮೀಪದ ಕೋಳೂರು ಗೇಟ್ನಲ್ಲಿ ವೀರಭದ್ರೇಶ್ವರ ಮಾಡ್ರನ್ ರೈಸ್ ಮಿಲ್ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಸಮಾಜದಲ್ಲಿ ಯಾವುದೇ ಹಿಂಸೆ ನಡೆಯಲಿ ಅಂತ ಆ ರೀತಿ ಹೇಳಿಕೆ ಕೊಟ್ಟಿಲ್ಲ. ವೋಟು ಪಡೆಯಲು ಜನಸಾಮಾನ್ಯರ ಬಳಿ ತೆರಳುವ ಜನಪ್ರತಿನಿಧಿಗಳು ಅವರ ಸಮಸ್ಯೆಗಳಿಗೆ ಸ್ಪಂದಿಸದಿದ್ದಾಗ ಜನರು ಒದ್ದು ಬುದ್ದಿ ಕಲಿಸಬಾರದು ಎಂದರೆ ಹೇಗೆ ಎಂದು ತಿರುಗೇಟು ನೀಡಿದರು.
ಉತ್ತರ ಕರ್ನಾಟಕದಲ್ಲಿನ ನೆರೆ ಸಂತ್ರಸ್ತರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದ್ದು, ಆ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರು ಇನ್ನು ಮುಂದೆ ಮೃದು ಧೋರಣೆ ಬಿಟ್ಟು ಜನಪ್ರತಿನಿಧಿಗಳಿಗೆ ಒದ್ದು ಬುದ್ದಿ ಕಲಿಸಬೇಕು ಎಂದು ಕುಮಾರಸ್ವಾಮಿ ಇತ್ತೀಚೆಗಷ್ಟೇ ಬಹಿರಂಗವಾಗಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಅಲ್ಲದೇ ನೈಸ್ ವಿಚಾರದಲ್ಲಿ ಆಡಳಿತಾರೂಢ ಸರ್ಕಾರ ನೈಸ್ ಪರವಾಗಿಯೇ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ರಾವಣನಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದರು. ಅಂತೂ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ಬಿಜೆಪಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸುವ ಮೂಲಕ ರಾಜಕೀಯ ಕೆಸರೆಚಾಟವನ್ನು ಮುಂದುವರಿಸಿದಂತಾಗಿದೆ.
Subscribe to:
Post Comments (Atom)
No comments:
Post a Comment