ಟ್ವೆಂಟಿ-20 ವಿಶ್ವಕಪ್ ವೈಫಲ್ಯದ ನಂತರ ಸುರೇಶ್ ರೈನಾ ನೇತೃತ್ವದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾವನ್ನೊಳಗೊಡ ತ್ರಿಕೋನ ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ.
ತಂಡದ ಹಿರಿಯ ಆಟಗಾರರಿಗೆ ವಿಶ್ರಾಂತಿ ಕಲ್ಪಿಸಿದ್ದರಿಂದ ಯುವ ಆಟಗಾರರಿಂದ ಪ್ರಚೋದಿತರಾಗಿರುವ ನಾಯಕ ಸುರೇಶ್ ರೈನಾ ಟೂರ್ನಿ ಗೆಲ್ಲುವ ವಿಶ್ವಾಸವಿರಿಸಿಕೊಂಡಿದ್ದಾರೆ.
ಯುವ ಆಟಗಾರರಿಗೆ ಅತ್ಯುತ್ತಮ ಅವಕಾಶವಾಗಿದ್ದು, ಆ ಮೂಲಕ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳಬಹುದಾಗಿದೆ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.
ಹಿರಿಯ ಆಟಗಾರರಿಗೆ ವಿಶ್ರಾಂತಿ ಕಲ್ಪಿಸುವ ಮೂಲಕ ಯುವ ಆಟಗಾರರನ್ನು ಆರಿಸಿರುವುದು ಮಂಡಳಿಯ ಧನಾತ್ಮಕ ಬೆಳವಣಿಗೆ ಎಂದವರು ಹೇಳಿದರು.
ತಂಡದ ಹಿರಿಯ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಆಶಿಶ್ ನೆಹ್ರಾ, ಹರಭಜನ್ ಸಿಂಗ್, ಯುವರಾಜ್ ಸಿಂಗ್ ಮತ್ತು ಪ್ರವೀಣ್ ಕುಮಾರ್ಗೆ ವಿಶ್ರಾಂತಿ ಕಲ್ಪಿಸಲಾಗಿದೆ. ಈ ನಡುವೆ ತಂಡವನ್ನು ರೈನಾ ಮುನ್ನಡೆಸಲಿದ್ದು, ವಿರಾಟ್ ಕೊಹ್ಲಿ ಉಪನಾಯಕನಾಗಿದ್ದಾರೆ.
ಪಂಕಜ್ ಸಿಂಗ್, ಅಶೋಕ್ ದಿಂಡಾ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ನಮನ್ ಓಜಾ ಮತ್ತು ಆರ್. ಆಶ್ವಿನ್ ತಂಡದಲ್ಲಿರುವ ಹೊಸಮುಖಗಳು.
ನಾನು ಕೋಚ್ ಗ್ಯಾರಿ ಕರ್ಸ್ಟನ್ ಜತೆ ಮಾತುಕತೆ ನಡೆಸಿದ್ದು, ಯೋಜನೆಯ ಬಗ್ಗೆ ಚರ್ಚಿಸಿದ್ದೇನೆ. ಅಲ್ಲದೆ ಅತ್ಯುತ್ತಮ ವೇಗದ ದಾಳಿ ಹೊಂದಿರುವ ನಮ್ಮ ಪಡೆಯು ಯುವ ಹಾಗೂ ಹಂಬಲದಲ್ಲಿದೆ ಎಂದವರು ಹೇಳಿದರು.
ಮೊದಲ ಬಾರಿಗೆ ತಂಡವನ್ನು ಮುನ್ನಡೆಸಲಿರುವ ರೈನಾ ಎಲ್ಲಾ ಪಂದ್ಯವನ್ನು ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ನಾನು ಪಾಸಿಟಿವ್ ಆಗಿ ಫೀಲ್ಡಿಂಗ್ಗಿಳಿಯಲಿದ್ದೇನೆ. ನಮ್ಮ ಅತ್ಯುತ್ತಮ ನಾಯಕರುಗಳಿಂದ ಸಾಕಾಷ್ಟು ಕಲಿತುಕೊಂಡಿದ್ದು, ಶಿಸ್ತು ಪಾಲನೆ ಅತೀ ಮುಖ್ಯವಾಗಿದೆ ಎಂದವರು ಹೇಳಿದರು.
ತಂಡದ ಆಯ್ಕೆ ಬಗ್ಗೆ ನನಗೆ ತೃಪ್ತಿಯಿದೆ. ಅಲ್ಲದೆ ಬಹುತೇಕ ಎಲ್ಲಾ ಆಟಗಾರರೊಂದಿಗೆ ರಾಷ್ಟ್ರೀಯ ತಂಡ, ಬಾರತ 'ಎ' ಅಥವಾ ಅಂಡರ್-19 ತಂಡದಲ್ಲಿ ಜತೆಯಾಗಿ ಆಡಿದ ಅನುಭವ ಹೊಂದಿದ್ದೇನೆ. ನನಗವರ ಬಗ್ಗೆ ತಿಳಿದಿದ್ದು, ಅವರಿಗೂ ನನ್ನ ಬಗ್ಗೆ ಚೆನ್ನಾಗಿ ಗೊತ್ತು ಎಂದು ರೈನಾ ವಿಶ್ವಾಸ ವ್ಯಕ್ತಪಡಿಸಿದರು.
ಭಾರತ ತನ್ನ ಪಯಣವನ್ನು ಮೇ 26 ಬುಧವಾರದಂದು ಬೆಳೆಸಲಿದ್ದು, 28ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ.
May 25, 2010
Subscribe to:
Post Comments (Atom)
No comments:
Post a Comment