19 ಬಾರಿ ಮಂಗಳೂರಿಗೆ ಹಾರಾಟ ನಡೆಸಿದ್ದ ಪೈಲಟ್
ಮುಂಬೈ, ಮೇ 22: ಮಂಗಳೂರು ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಪೈಲಟ್ ಝಡ್. ಗ್ಲುಸಿಕಾ ಅವರು ಸರ್ಬಿಯಾ ಮೂಲದ ಬ್ರಿಟಿಶ್ ಪ್ರಜೆಯಾಗಿದ್ದಾರೆ. 53 ವರ್ಷ ವಯಸ್ಸಿನ ಗ್ಲುಸಿಕಾಗೆ 10 ಸಾವಿರ ತಾಸುಗಳ ಹಾರಾಟದ ಅನುಭವವಿತ್ತು ಮತ್ತು ಅವರು ಕಳೆದ ಎರಡು ವರ್ಷಗಳಿಂದ ಭಾರತ ದಲ್ಲಿ ಪೈಲಟ್ ವೃತ್ತಿಯಲ್ಲಿ ತೊಡಗಿದ್ದರು.
ಗ್ಲುಸಿಕಾ 19 ಬಾರಿ ಮಂಗಳೂರಿಗೆ ವಿಮಾನ ಹಾರಾಟ ನಡೆಸಿದ್ದಾರೆ. ಸಹ ಪೈಲಟ್ ಎಚ್.ಎಸ್.ಅಹ್ಲುವಾಲಿಯಾ 66 ಬಾರಿ ಮಂಗಳೂರಿಗೆ ಹಾರಾಟ ನಡೆಸಿದ್ದಾರೆ.
ಗ್ಲುಸಿಕಾರ ಪೈಲಟ್ ಲೈಸೆನ್ಸ್ಗೆ ನಾಗರಿಕ ವಾಯುಯಾನ ಸಚಿವಾಲಯದ ಅನುಮೋ ದನೆಯಿತ್ತು. ಹೀಗಾಗಿ ಅವರು ಭಾರತದಲ್ಲೂ ಪೈಲಟ್ ವೃತ್ತಿಯನ್ನು ನಿರ್ವಹಿಸಲು ಅರ್ಹತೆ ಪಡೆದಿದ್ದರೆಂದು ಏರ್ಇಂಡಿಯಾ ನಿರ್ದೇಶಕ (ಸಿಬ್ಬಂದಿ) ಅನೂಪ್ ಶ್ರೀವಾಸ್ತವ ತಿಳಿಸಿದ್ದಾರೆ.
ವಿದೇಶಿಯರಾದ ಗ್ಲುಸಿಕಾಗೆ ಭಾರತದ ಹವಾಮಾನ ಪರಿಸ್ಥಿತಿಗಳ ಬಗ್ಗೆ ಉತ್ತಮ ಪರಿಜ್ಞಾನವಿರಲಿಲ್ಲವೆಂಬ ಪತ್ರಕರ್ತರ ಅನಿಸಿಕೆ ಗಳನ್ನು ತಳ್ಳಿಹಾಕಿದ ಶ್ರೀವಾಸ್ತವ, ಕಳೆದ ಎರಡು ವರ್ಷಗಳಿಂದ ಗ್ಲುಸಿಕಾ ಭಾರತದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದಾರೆಂದು ತಿಳಿಸಿದರು.
ಇದಕ್ಕೂ ಮುನ್ನ ಗ್ಲುಸಿಕಾ ಮೇ 17ರಂದು ಸಹಪೈಲಟ್ ಎಚ್.ಎಸ್. ಅಹ್ಲುವಾಲಿಯಾ ಜೊತೆಗೆ ಮಂಗಳೂರಿಗೆ ಹಾರಾಟ ನಡೆಸಿದ್ದರೆಂದು ಅವರು ತಿಳಿಸಿದರು. ಕರ್ನಾಟಕದ ನಿವಾಸಿಯಾದ ಅಹ್ಲುವಾಲಿಯಾ, ಕಳೆದ ವರ್ಷದ ಎಪ್ರಿಲ್ನಿಂದ ಮಂಗಳೂರಿಗೆ ವಿಮಾನ ಹಾರಾಟ ನಡೆಸಿದ್ದರು ಮತ್ತು ಅವರಿಗೆ 3750 ಗಂಟೆಗಳ ಹಾರಾಟದ ಅನುಭವವಿದೆ ಎಂದು ಶ್ರೀವಾಸ್ತವ ಹೇಳಿದರು.
ವಿಮಾನವು ಎರಡೂವರೆ ವರ್ಷ ಹಳೆಯದಾಗಿದ್ದು, ಹಾರಾಟಕ್ಕೆ ಸಂಪೂರ್ಣ ಯೋಗ್ಯವಾಗಿತ್ತೆಂದು ಅವರು ತಿಳಿಸಿದರು.
ಭಾರತದ ಅಪಾಯಕಾರಿ ವಿಮಾನ ನಿಲ್ದಾಣಗಳು
ಬೆಂಗಳೂರು, ಮೇ 22: ವಿಮಾನಗಳು ಹೊರಡುವ ಮತ್ತು ಭೂಸ್ಪರ್ಷ ಮಾಡುವ ನಿಯಮಗಳಲ್ಲಿರುವ ಸಂಕೀರ್ಣ ಮತ್ತು ವಿಶಿಷ್ಟತೆಯಿಂದಾಗಿ ಭಾರತದ ಕೆಲವು ವಿಮಾನ ನಿಲ್ದಾಣಗಳು ವಿಶೇಷ ಹಣೆಪಟ್ಟಿಯನ್ನು ಹೊಂದಿವೆ. ಇಂತಹ ಹಣೆಪಟ್ಟಿ ಹೊಂದಿರುವ ವಿಮಾನ ನಿಲ್ದಾಣಗಳು ಬೆಟ್ಟ ಮತ್ತು ಪರ್ವತ ಪ್ರದೇಶ, ನದಿ ಅಥವಾ ನೀರಾವರಿ ಘಟಕಗಳು ಅಥವಾ ಸಮುದ್ರಗಳ ಬಳಿಯ ಲ್ಲ್ಲಿದ್ದು, ಅವುಗಳನ್ನು ಅಪಾಯಕಾರಿ ನಿಲ್ದಾಣಗಳೆಂದೂ ಪರಿಗಣಿಸಲಾಗಿದೆ.
ಅಂತಹ ವಿಶೇಷ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಮಂಗಳೂರು ವಿಮಾನ ನಿಲ್ದಾಣವೂ ಸೇರಿದೆ. ಇನ್ನುಳಿದಂತೆ ಶ್ರೀನಗರ, ಲೇಹ್, ಪೋರ್ಟ್ಬ್ಲೇರ್, ಕಲ್ಕತ್ತಾ ಮತ್ತು ಲಕ್ಷದ್ವೀಪದಲ್ಲಿರುವ ಅಗಟ್ಟಿ ವಿಮಾನ ನಿಲ್ದಾಣ ಈ ಪಟ್ಟಿಯಲ್ಲಿ ಸೇರಿದೆ. ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗುವವರೆಗೆ ವಿಶಾಖಪಟ್ಟಣಂ ವಿಮಾನ ನಿಲ್ದಾಣವೂ ಈ ಪಟ್ಟಿಯಲ್ಲಿತ್ತು.
‘‘ಲೇಹ್ ಮತ್ತು ಪೋರ್ಟ್ಬ್ಲೇರ್ನ ವಿಮಾನ ನಿಲ್ದಾಣದಲ್ಲಿರುವ ರನ್ವೇಗಳು ಸರಿಯಾದ ನಿರ್ದೇಶನ ಹೊಂದಿಲ್ಲ. ವಿಮಾನ ಹೊರಡುವ ಮತ್ತು ಭೂಸ್ಪರ್ಷ ಮಾಡುವ ಕುರಿತು ಗಾಳಿಯ ದಿಕ್ಕಿಗನುಗುಣವಾಗಿ ಸೂಕ್ತ ನಿರ್ದೇಶನ ಈ ರನ್ವೇಗಳಲ್ಲಿ ಇಲ್ಲ. ಈ ವಿಮಾನ ನಿಲ್ದಾಣಗಳು ಪರ್ವತ ಪ್ರದೇಶದಲ್ಲಿರುವ ಹಿನ್ನೆಲೆಯಲ್ಲಿ ರನ್ವೇ ಈ ರೀತಿ ಇದೆ’’ ಎಂದು ಮಾಜಿ ನೌಕಾ
ಸೇನೆಯ ಪೈಲಟ್, 35 ವರ್ಷಗಳ ಸೇವಾ ಅನುಭವಿಯೊಬ್ಬರು ಹೇಳುತ್ತಾರೆ.
ಮಂಗಳೂರು ವಿಮಾನ ನಿಲ್ದಾಣವೂ ಬೆಟ್ಟ ಪ್ರದೇಶದಲ್ಲಿದೆ. ಇಲ್ಲಿ ರನ್ವೇಯನ್ನು ಭೂಮಿಯ ಸಮತಲದಲ್ಲಿ ನಿರ್ಮಿಸಲಾಗಿದ್ದು, ರನ್ವೇಯ ಅಂತ್ಯದಲ್ಲಿ ಇಳಿಮುಖವಾಗಿದೆ. ಇದು ಪೈಲಟ್ಗಳಿಗೆ ಗೊಂದಲವನ್ನುಂಟು ಮಾಡುವ ಸಾಧ್ಯತೆಯಿದೆ. ಏರ್ಇಂಡಿಯಾ ಎಕ್ಸ್ಪ್ರೆಸ್ ದುರಂತದಲ್ಲಿ ಈ ಗೊಂದಲ ಉಂಟಾಗಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
May 23, 2010
Subscribe to:
Post Comments (Atom)
No comments:
Post a Comment