ಪಶ್ಚಿಮ ಮಿಡ್ನಾಪುರದಿಂದ ಮುಂಬೈಗೆ ಬರುತ್ತಿದ್ದ ಜ್ಞಾನೇಶ್ವರಿ ಏಕ್ಸ್ಪ್ರೆಸ್ ರೈಲು ಹಳಿ ಸ್ಫೋಟಗೊಂಡ ಪರಿಣಾಮ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಸಂಭವಿಸಿ ನೂರು ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಎಫ್ಐಆರ್ ದಾಖಲಿಸಿದೆ. ಆದರೆ ಎಫ್ಐಆರ್ನಲ್ಲಿ ಮಾವೋವಾದಿಗಳ ಹೆಸರು ದಾಖಲಾಗಿಲ್ಲ.
ಘಟನೆ ಕುರಿತಂತೆ ಜ್ಞಾನೇಶ್ವರಿ ಸೂಪರ್ ಡಿಲಕ್ಸ್ ಎಕ್ಸ್ಪ್ರೆಸ್ ರೈಲಿನ ಚಾಲಕ ಬಿ.ದಾಶ್ ಅವರು ಗವರ್ನ್ಮೆಂಟ್ ರೈಲ್ವೇ ಪೊಲೀಸ್(ಜಿಆರ್ಪಿ)ಗೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಅಪರಿಚಿತ ವ್ಯಕ್ತಿಗಳು ಎಂದಷ್ಟೇ ದಾಖಲಿಸಲಾಗಿದೆ.ಎಫ್ಐಆರ್ನಲ್ಲಿ ಮಾವೋವಾದಿಗಳ ಶಾಮೀಲಿನಿಂದ ಈ ಘಟನೆ ಸಂಭವಿಸಿದೆ ಎಂಬ ಉಲ್ಲೇಖ ಇಲ್ಲ, ರೈಲು ಹಳಿ ತಪ್ಪುವ ಮುನ್ನ ಭಾರೀ ಶಬ್ದ ಕೇಳಿ ಬಂದಿತ್ತು ಎಂದಷ್ಟೇ ಚಾಲಕ ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ಜ್ಞಾನೇಶ್ವರಿ ಸೂಪರ್ ಡಿಲಕ್ಸ್ ರೈಲು ಶುಕ್ರವಾರ ರಾತ್ರಿ 1.30ಕ್ಕೆ ಮುಂಬೈಗೆ ಆಗಮಿಸುತ್ತಿದ್ದ ವೇಳೆ ಖೇಮಾಸೋಲಿ ಮತ್ತು ಸಾರ್ಡಿಯಾ ನಿಲ್ದಾಣ ಸಮೀಪ ಶಂಕಿತ ಮಾವೋವಾದಿಗಳು ರೈಲ್ವೆ ಹಳಿಯನ್ನು ಸ್ಫೋಟಿಸಿದ ಪರಿಣಾಮ ಅದು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು, ಸುಮಾರು ನೂರು ಮಂದಿ ಸಾವಿಗೆ ಕಾರಣವಾಗಿತ್ತು. ಈ ಘಟನೆಯ ಹಿಂದೆ ಮಾವೋವಾದಿಗಳ ಕೈವಾಡ ಇರುವುದಾಗಿ ಆರಂಭಿಕವಾಗಿ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಮತ್ತು ಪೊಲೀಸ್ ಅಧಿಕಾರಿಗಳು ಆರೋಪಿಸಿದ್ದರು.
ಅಲ್ಲದೇ ಘಟನಾ ಸ್ಥಳದಲ್ಲಿಯೂ ಮಾವೋ ಬೆಂಬಲಿತ ಪೀಪಲ್ಸ್ ಕಮಿಟಿ ಆಗೈನೆಸ್ಟ್ ಪೊಲೀಸ್ ಅಟ್ರೋಸಿಟಿಸ್ ಎಂಬ ಬುಡಕಟ್ಟು ಗುಂಪಿನ ಕರಪತ್ರವನ್ನು ಪೊಲೀಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ರೈಲು ಹಳಿ ಸ್ಫೋಟಿಸಿದ ಹೊಣೆಯನ್ನು ತಾವೇ ಹೊತ್ತುಕೊಂಡಿರುವುದಾಗಿಯೂ ಈ ಸಂಘಟನೆ ಹೇಳಿಕೆ ನೀಡಿತ್ತು.
Subscribe to:
Post Comments (Atom)
No comments:
Post a Comment